May 30, 2026
WhatsApp Image 2026-04-09 at 10.33.18 AM

ಬೆಳಗಾವಿ

• ಕನ್ನಡ ಸಂಘಟನೆಗಳ ಹೋರಾಟಕ್ಕೆ ಸಂದ ಜಯ

• ಅನುದಾನ ದುರ್ಬಳಕೆ ತನಿಖೆಗೆ ಸರ್ಕಾರದ ಆದೇಶ

• ಪ್ರಾದೇಶಿಕ ಆಯುಕ್ತರಿಂದ ನಡೆಯಲಿದೆ ಸಮಗ್ರ ವಿಚಾರಣೆ

• 12 ಕನ್ನಡ ಸಂಘಟನೆಗಳ ದೂರಿಗೆ ಸ್ಪಂದನೆ

ಬೆಳಗಾವಿಯ ಹಿರಿಯ ಹೋರಾಟಗಾರ ಅಶೋಕ ಚಂದರಗಿ ನೇತೃತ್ವದಲ್ಲಿ ನಡೆದ ಕನ್ನಡ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಿದೆ. ರಾಜ್ಯೋತ್ಸವದ 50 ಲಕ್ಷ ರೂಪಾಯಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ , ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.

ಬೆಳಗಾವಿ ಜಿಲ್ಲಾಡಳಿತವು ಕನ್ನಡ ಸಂಘಟನೆಗಳ ಸಲಹೆಗಳನ್ನು ಕಡೆಗಣಿಸಿ ಹಾಗೂ ಸರ್ಕಾರದ ಶರತ್ತುಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದರ ವಿರುದ್ಧ ಅಶೋಕ ಚಂದರಗಿ ಅವರ ನೇತೃತ್ವದ 12 ಸಮಾನ ಮನಸ್ಕ ಸಂಘಟನೆಗಳು ದೂರುಗಳ ಪ್ರವಾಹವನ್ನೇ ಹರಿಸಿದ್ದವು. ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ ದೂರಿನನ್ವಯ ಈಗ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಮತ್ತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಅನುದಾನ ಬಳಕೆ ಮಾಡಿದ್ದರ ಕುರಿತು ಈಗ ಸತ್ಯಾಸತ್ಯತೆ ಹೊರಬರಬೇಕಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ , ಇದು ಕನ್ನಡ ಪರ ಸಂಘಟನೆಗಳ ಒಗ್ಗಟ್ಟಿಗೆ ಸಂದ ಜಯ ಎಂದಿದ್ದಾರೆ. ಜಿಲ್ಲಾಧಿಕಾರಿಗಳ ಏಕಪಕ್ಷೀಯ ನಡೆ ಮತ್ತು ನಿಯಮಗಳ ಉಲ್ಲಂಘನೆಯ ವಿರುದ್ಧ ತನಿಖೆ ನಡೆಸಿ ಶೀಘ್ರವಾಗಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555