ಬೆಂಗಳೂರು ♥
ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು. ಹೆರಿಗೆಯಾದ 5 ವರ್ಷದ ತನಕ ಶಿಕ್ಷಕಿ ಇಚ್ಛಿಸಿದೆಡೆಗೆ ಟ್ರಾನ್ಸ್ಫರ್, 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ,ಕಲ್ಯಾಣ ಸೀಮೆಗೆ 10 ವರ್ಷ ಕಡ್ಡಾಯ, ಶಿಕ್ಷಕರನ್ನು ಇನ್ನು ಮುಂದೆ ಬೋಧಕೇತರ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂಬ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
• ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ಮುಂದಾದ ರಾಜ್ಯ ಸರ್ಕಾರ; ವಿಧೇಯಕಕ್ಕೆ ಅನುಮೋನೆ.
• ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಟೀಚರ್ ಆಗಬಹುದು; ಹೆರಿಗೆಯಾದ 5 ವರ್ಷದ ತನಕ ಶಿಕ್ಷಕಿ ಇಚ್ಛಿಸಿದೆಡೆಗೆ ಟ್ರಾನ್ಸ್ಫರ್, 2 ಮಕ್ಕಳಿಗಷ್ಟೇ ಸೇವೆ
• 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ, ಕಲ್ಯಾಣ ಸೀಮೆಗೆ 10 ವರ್ಷ ಮುಡುಪಿಡಿ
• ಶಿಕ್ಷಕರನ್ನು ಇನ್ನು ಮುಂದೆ ಬೋಧಕೇತರ ಕೆಲಸಗಳಿಗೆ ನಿಯೋಜಿಸುವಂತಿಲ್ಲ
ಬೆಂಗಳೂರು: ಶಾಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ ‘ತುರ್ತು ಸೇವಾ ಗುಂಪು’ ಎಂದು ಪರಿಗಣಿಸಿ ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ಹಾಗೂ ಗರ್ಭಿಣಿ ಶಿಕ್ಷಕಿ ಅಥವಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹೊಂದಿರುವ ಶಿಕ್ಷಕಿಯರು ಪ್ರಸೂತಿ ರಜೆ ಬಳಿಕ ಕರ್ತವ್ಯಕ್ಕೆ ಮರಳುವಾಗ ತಮಗೆ ಅನುಕೂಲವಾಗುವಂತಹ ಶಾಲೆಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸುವ ಮಹತ್ವದ ವಿಧೇಯಕ ವಿಧಾನಸಭೆಯಲ್ಲಿ ಮಂಗಳವಾರ ಅನುಮೋದನೆಯಾಯಿತು.
