ರಾಯಬಾಗ
• ಇತ್ತೀಚಿನ ದಿನಗಳಲ್ಲಿ ಜನರು ತೀವ್ರ ಮಾನಸಿಕ ಒತ್ತಡ ಹಾಗೂ ಕೆಲಸದ ಒತ್ತಡದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಂತ ಪ್ರಮುಖ ಸಾಧನವಾಗಿದೆ. ಹಾಗಾಗಿ ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ದಿನಚರಿಯನ್ನಾಗಿ ರೂಢಿಸಿಕೊಳ್ಳಬೇಕು ಎಂದು ಗಣ್ಯರು ಕೃಷ್ಣ ಕೋಟಿವಾಲೆ ಕರೆ ನೀಡಿದರು.
• ಇಲ್ಲಿನ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ತಿಂಗಳ “ಪತಂಜಲಿ ಅಡ್ವಾನ್ಸ್ ಯೋಗ ಶಿಬಿರ”ವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅದರ ಸಮಾರೋಪ ಹಾಗೂ ಮುಕ್ತಾಯ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಗಿಡಕ್ಕೆ ನೀರು ಉಣಿಸುವ ಮೂಲಕ ಕಾರ್ಯಕ್ರಮವನ್ನು ಪರಿಸರ ಸ್ನೇಹಿಯಾಗಿ ಉದ್ಘಾಟಿಸಲಾಯಿತು.

ಸರ್ಕಾರಿ ಜಾಗದ ಭರವಸೆ ನೀಡಿದ ತಹಶೀಲ್ದಾರ್
• ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ತಾಲೂಕು ದಂಡಾಧಿಕಾರಿಗಳು (ತಹಶೀಲ್ದಾರ್) ಆದ ಮಹದೇವ ಸನಮುರಿ ಅವರು, “ಯೋಗದ ಮಹತ್ವ ಹಾಗೂ ಸಾರ್ವಜನಿಕರಿಗೆ ಇದರಿಂದಾಗುವ ಪ್ರಯೋಜನವನ್ನು ಪರಿಗಣಿಸಿ, ಸರ್ಕಾರದ ವತಿಯಿಂದ ಪತಂಜಲಿ ಯೋಗ ಪೀಠಕ್ಕೆ ಆದಷ್ಟು ಬೇಗನೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡಲಾಗುವುದು,” ಎಂದು ಭರವಸೆ ನೀಡಿದರು.
ದಿನಾಲು ಯೋಗ ಮಾಡಿ, ನಿರೋಗಿಯಾಗಿರಿ
• ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೋಟಿವಾಲೆ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಇನ್ನು ಮುಂದೆ ಪತಂಜಲಿ ಯೋಗ ಸಮಿತಿ ವತಿಯಿಂದ ದಿನಾಲು ಮುಂಜಾನೆ ಯೋಗ ತರಗತಿಗಳು ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ನಿರೋಗಿಗಳಾಗಬೇಕು ಎಂದು ತಿಳಿಸಿದರು. ವೇದ ಗುರುಗಳಾದ ನಿಶಾಲಿಮಟ್, ಸ್ತ್ರೀ ರೋಗ ವೈದ್ಯರಾದ ಡಾ. ಬಾನೆ, ಹಾಗೂ ಡಾ. ನಾಯಕ್ ಅವರು ಯೋಗ ಮತ್ತು ಆರೋಗ್ಯದ ಸಮನ್ವಯತೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಯೋಗ ಶಿಕ್ಷಕರಿಗೆ ಗೌರವ ಸಮರ್ಪಣೆ
• ಇದೇ ಸಂದರ್ಭದಲ್ಲಿ ಯೋಗ ಶಿಬಿರದಲ್ಲಿ ನಿರಂತರವಾಗಿ ಯೋಗ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ತರಬೇತಿ ಮುಗಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಅವರ ಮುಂದಿನ ಯೋಗ ಶಿಕ್ಷಕ ವೃತ್ತಿ ಯಶಸ್ವಿಯಾಗಿ ಸಾಗಲಿ ಎಂದು ಗಣ್ಯರು ಶುಭ ಹಾರೈಸಿದರು.
ಉಪಸ್ಥಿತರಿದ್ದ ಗಣ್ಯರು:
• ಈ ಯಶಸ್ವಿ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಸಂಜು ಕುಸ್ತಿಗಾರ್, ದಯಾನಂದ್ ಹಿರೇಮಠ, ವೈದ್ಯರಾದ ವೈಭವ್ ಮಹಾಜನ,ಗಾಯತ್ರಿ ಬಾನೆ, ಶೆಟ್ಟಿ ಸರ್, ಬಾಹುಬಲಿ ಪಾಟೀಲ್, ವಿನೋದ್ ಪೂಜಾರಿ, ಸಂದೇಶ್ ಶೆಟ್ಟಿ, ತೇಲಿ ಸಾರ್, ಮಹಾವೀರ್ ಶೆಟ್ಟಿ, ಲೋಕೇಶ್ ಮೇತ್ರಿ ಸೇರಿದಂತೆ ನೂರಾರು ಯೋಗ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
