ಹಾರೂಗೇರಿ
ಕಳೆದ ಆರು ವರ್ಷಗಳ ಹಿಂದೆ (2020ರಲ್ಲಿ) ನಿಗೂಢವಾಗಿ ನಾಪತ್ತೆಯಾಗಿ, ಪೊಲೀಸರಿಗೇ ದೊಡ್ಡ ತಲೆನೋವಾಗಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಪ್ರಕರಣದ ಹಿನ್ನೆಲೆ: ಜಮಖಂಡಿ ಮೂಲದ ನಿವಾಸಿಯಾದ ಗುರುಪಾದ ಇಂಚಗೇರಿ ಎಂಬುವವರು ಕಳೆದ 2020ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸರು ಹರಸಾಹಸ ಪಟ್ಟರೂ ಯಾವುದೇ ಸುಳಿವು ಸಿಗದ ಕಾರಣ, ಪ್ರಕರಣವನ್ನು ‘ನಾಪತ್ತೆ’ (Traced Out ಆಗಿಲ್ಲ) ಎಂದು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಗಿತ್ತು.
• ತಂತ್ರಜ್ಞಾನ ತಂದ ತಿರುವು
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಬಳಕೆಗೆ ಬಂದಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೈಬರ್ ಸೆಲ್ನ ನೆರವನ್ನು ಪಡೆದ ಹಾರೂಗೇರಿ ಪೊಲೀಸರು, ಹಳೇ ಫೈಲ್ಗಳನ್ನು ಮರುಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಂತ್ರಿಕ ವಿಶ್ಲೇಷಣೆಯ ಮೂಲಕ ಗುರುಪಾದ ಇಂಚಗೇರಿ ಅವರು ವಿಜಯಪುರದಲ್ಲಿ ಜೀವಂತವಾಗಿ ಇರುವುದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
• ಮನೆ ಬಿಡಲು ಕಾರಣವೇನು?
ಪೊಲೀಸರು ಗುರುಪಾದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಪತ್ನಿಯೊಂದಿಗೆ ಉಂಟಾಗಿದ್ದ ಕೌಟುಂಬಿಕ ಮನಸ್ತಾಪ ಹಾಗೂ ಜಗಳದಿಂದ ಬೇಸತ್ತು ತಾವೇ ಸ್ವತಃ ಯಾರಿಗೂ ಹೇಳದೆ ಮನೆ ಬಿಟ್ಟು ಬಂದು ವಿಜಯಪುರದಲ್ಲಿ ವಾಸವಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ
• ಪೊಲೀಸ್ ತಂಡಕ್ಕೆ ಶ್ಲಾಘನೆ:
ವರ್ಷಗಳೇ ಕಳೆದರೂ ಪಟ್ಟುಬಿಡದೆ, ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕಗ್ಗಂಟಾಗಿದ್ದ ಪ್ರಕರಣವನ್ನು ಭೇದಿಸಿದ ಹಾರೂಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಇಡೀ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ.
