ರಾಯಬಾಗ♥
ರಾಯಬಾಗ: ಮಡಿವಾಳ ಮಾಚಿದೇವರ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಸಮುದಾಯದ ಮುಖಂಡರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ರಾಜ್ಯ ಸರ್ಕಾರ ಮಡಿವಾಳ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಸಮುದಾಯದವರು ಸರ್ಕಾರದಿಂದ ಸಿಗಬೇಕಾದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ದೇಶದ 18 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗಿದ್ದು, ಅಲ್ಲಿ ಸಮುದಾಯದವರು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಸಮುದಾಯಕ್ಕೆ ಇನ್ನೂ ಮಾನ್ಯತೆ ನೀಡದಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.
ತಹಸೀಲ್ದಾರ್ ಮಹಾದೇವ ಸನಮೂರಿ ಮನವಿ ಸ್ವೀಕರಿಸಿದರು. ಈ ವೇಳೆ ಗುಂಡೂರಾವ್ ಪರಿಟ್, ಮೋಹನ ಪರಿಟ್, ಮೋಹನ ಮಡಿವಾಳ, ರಾಜಕುಮಾರ ಮಡಿವಾಳ, ಸಂಜೀವಕುಮಾರ ಮಡಿವಾಳ, ರೇವಪ್ಪ ಮಾರುತಿ ಮಡಿವಾಳ, ಈರಪ್ಪ, ಸಚಿನ್ ಪರಿಟ್, ವಿಜಯ ಪರಿಟ್, ಗಣೇಶ ಮಡಿವಾಳ, ರಾಜು ಮಡಿವಾಳ, ಸುನಿಲ್ ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
